ಮಂಗಳೂರು: ಮಗು ಅಪಹರಣಕ್ಕೀಡಾದ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ ಕಂಕನಾಡಿ ಪೊಲೀಸರ ಪರಾಕ್ರಮ ಸರ್ವತ್ರ ಶ್ಲಾಘನೆಗೊಳಗಾಗಿದೆ. ಕೇರಳ ಎರ್ನಾಕುಲಂ ಜಿಲ್ಲೆಯ ಕಂಡತ್ತಿಲ್, ಮುತ್ತುವಯಲ್, ತಾತಪಿಲ್ಲಿ, ಪರವೂರ್ ನಿವಾಸಿ ಅನೀಶ್ ಕುಮಾರ್(49) ಬಂಧಿತ ಆರೋಪಿ.
ಮಂಗಳೂರು ನಗರದ ಅಳಪೆ ಪಡೀಲ್ ನಲ್ಲಿರುವ ಅರಣ್ಯ ಇಲಾಖೆಯ ಸಸ್ಯವನ ಬಳಿ ಆ.31ರಂದು ಸಂಜೆ ವೇಳೆಗೆ ಸುಮಾರಿಗೆ ಎರಡುವರೆ ವರ್ಷದ ಮಗು ಅಪಹರಣ ಆದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ಬಂದಿತ್ತು.
ತನಿಖೆಯ ಜಾಡು ಹಿಡಿದ ಪೊಲೀಸರಿಗೆ ಅನೀಶ್ ಕುಮಾರನ ಕೈವಾಡ ಇರುವುದು ಪತ್ತೆಯಾಗಿತ್ತು. ಈತನು ತನ್ನ ಊರಿನಿಂದ ತಾರೀಖು 28 ರಂದು ಮನೆಯಲ್ಲಿ ಗಲಾಟೆ ಮಾಡಿಕೊಂಡು ಮುಂಬೈಗೆ ರೈಲಿನಲ್ಲಿ ಹೋಗಿದ್ದ. ಅಲ್ಲಿಂದ ಗೋವಾದಲ್ಲಿ ರೈಲಿನಿಂದ ಇಳಿದಿದ್ದ. ಆ. 31 ರಂದು ಗೋವಾದಿಂದ ಹೊರಟು ಮಂಗಳೂರಿಗೆ ಬಂದಿದ್ದ.
ಪಡೀಲ್ ಅಳಪೆಯ ಅರಣ್ಯ ವನದ ಮುಂಭಾಗದಲ್ಲಿ ಒಂದು ಹೆಣ್ಣು ಮಗು ನಡೆದುಕೊಂಡು ಹೋಗುತ್ತಿದ್ದನ್ನು ನೋಡಿದ ಅನೀಶ್ ತನಗೆ ಹೆಣ್ಣು ಮಕ್ಕಳಿಲ್ಲವೆಂದು ಆಸೆಯಿಂದ ಈ ಹೆಣ್ಣು ಮಗುವನ್ನು ಕರೆದುಕೊಂಡು ಹೋಗಿದ್ದಾನೆ.
ಆರೋಪಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕಾಸರಗೋಡು ಕಡೆಗೆ ಹೋಗುವ ರೈಲಿನಲ್ಲಿ ಹೋಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿದ ಕಂಕನಾಡಿ ಪೊಲೀಸರು ತಕ್ಷಣ, ಕಾಸರಗೋಡಿನ ರೈಲ್ವೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು.

ತಕ್ಷಣ ಕಾರ್ಯ ಪ್ರವೃತರಾಗಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವಕುಮಾರ್ ಮತ್ತು ತಂಡವು ಕಾಸರಗೋಡಿಗೆ ತೆರಳಿ ಕಾಸರಗೋಡಿನ ರೈಲ್ವೇ ಪೊಲೀಸರ ಸಹಾಯದೊಂದಿಗೆ ಜಂಟಿ ಆಗಿ ಆರೋಪಿ ಹಾಗೂ ಮಗುವನ್ನು ವಶಕ್ಕೆ ಪಡೆದಿದ್ದಾರೆ. ಇಂದು ಮಗುವಿನ ತಂದೆ ತಾಯಿಯವರಿಗೆ ಮಗು ನೀಡಲಾಗಿದೆ.
ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ (ಐ.ಪಿ.ಎಸ್ ) ಅವರ ಮಾರ್ಗದರ್ಶನದಂತೆ ಸಿದ್ದಾರ್ಥ್ ಗೋಯಲ್ (ಕಾ&ಸು) ಐ.ಪಿ.ಎಸ್ ಮತ್ತು ದಿನೇಶ್ ಕುಮಾರ್ ಕೆ.ಎನ್.ಪಿ.ಎಸ್ ಮಾನ್ಯ ಉಪ-ಪೊಲೀಸ್ ಆಯುಕ್ತರು ಅಪರಾಧ ಹಾಗೂ ಸಂಚಾರ ರವರ ನಿರ್ದೇಶನದಂತೆ ಹಾಗೂ ಧನ್ಯಾ ನಾಯಕ್ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ದಕ್ಷಿಣ ವಿಭಾಗರವರ ಸೂಚನೆಯಂತೆ ಕಂಕನಾಡಿ ನಗರ ಠಾಣೆಯ ನಿರೀಕ್ಷಕರಾದ ಟಿ.ಡಿ ನಾಗರಾಜ್ ಮಾರ್ಗದರ್ಶನದಂತೆ ಪಿ.ಎಸ್.ಐ ಶಿವಕುಮಾರ್, ಎ.ಎಸ್.ಐ ಅಶೋಕ್ ಹಾಗೂ ಸಿಬ್ಬಂದಿಯವರಾದ ಅಶೀತ್ ಡಿ’ಸೋಜಾ, ಕುಶಾಲ್ ಹೆಗ್ಡೆ, ರಾಘವೇಂದ್ರ, ಪೂಜಾ ಆರೋಪಿ ಕಾರ್ಯದಲ್ಲಿ ಭಾಗವಹಿಸಿದ್ದರು.



















